Monday, January 12, 2009

ಹಾದಿ...ಹೆಜ್ಜೆಗುರುತು...

ಸುಮಾರು ಐದು ವರ್ಷಗಳಿಂದ ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ, ಪ್ರಸ್ತುತ ಉಪನ್ಯಾಸಕಿಯಾಗಿ ಪತ್ರಿಕಾ ರಂಗದೊಂದಿಗಿನ ಒಡನಾಟ ಹಾಗೂ ಸುಮಾರು ೧೮ ವರ್ಷಗಳಿಂದ ಭರತನಾಟ್ಯ ವಿದ್ಯಾರ್ಥಿನಿಯಾದ ನನಗೆ ಪ್ರತೀಸಲ ಬರೆಯಬೇಕಾದಾಗಲೂ ಕಾಣುತ್ತಿದ್ದದ್ದು ನೃತ್ಯಕ್ಕೆ ಸಂಬಂಧಿಸಿದಂತೆ ಭಾವನೆಗಳನ್ನು, ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತವಾದ ವೇದಿಕೆಯ ಕೊರತೆ; ಜೊತೆಗೆ ಇತರ ಪತ್ರಿಕೆಗಳಲ್ಲೂ ನೃತ್ಯಮಾಧ್ಯಮದ ಕುರಿತಂತೆ ಸಂವಾದ, ಚರ್ಚೆಗಳು, ವಸ್ತುನಿಷ್ಟ ವಿಮರ್ಶೆಗಳು ವಿರಳವಾಗುತ್ತಿದ್ದದ್ದು. ನೃತ್ಯಕ್ಕೆ, ಅದರಲ್ಲೂ ಭರತನಾಟ್ಯಕ್ಕೆ ಸಂಬಂಧಿಸಿದಂತೆ ಕೆಲವು ಪತ್ರಿಕೆಗಳು ಇವೆಯಾದರೂ ಸಾಮಾನ್ಯ ಜನಜೀವನಕ್ಕೆ ತಲುಪುವ ಸಾಧ್ಯತೆ ಇತ್ತೀಚೆಗೆ ಬಹಳ ಕಡಿಮೆಯಾಗುತ್ತ ಹೋಗಿದೆ. ಜೊತೆಗೆ ನೃತ್ಯದ ಕೇವಲ ಶಾಸ್ತ್ರೀಯತೆಯನ್ನಷ್ಟೇ ಅವಲೋಕಿಸದೇ, ಅದರ ಪ್ರಸ್ತುತ ನೆಲೆಗಟ್ಟು, ಸ್ಥಿತಿಗತಿ, ಪರ-ವಿರೋಧ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿಕ್ಕೆ ಪತ್ರಿಕೆ ಬೇಕೆನ್ನಿಸಿದ್ದು ಹೌದು. ಪತ್ರಿಕೋದ್ಯಮದ ವಿದ್ಯಾರ್ಥಿನಿಯಾಗಿ ಕೇವಲ ಸಾಮಾಜಿಕ-ಸಾಮುದಾಯಿಕ ವಿಷಯಗಳಷ್ಟಕ್ಕೇ ಬೆಳಕು ಚೆಲ್ಲದೆ, ಸಾಂಸ್ಕೃತಿಕವಾಗಿಯೂ ಗಟ್ಟಿಗೊಳ್ಳುವಲ್ಲಿ ಮತ್ತು ವಿರಳವಾಗುತ್ತಿರುವ ಸಾಂಸ್ಕೃತಿಕ ಪತ್ರಿಕೋದ್ಯಮಕ್ಕೊಂದು ಸಣ್ಣಮಟ್ಟಿನ ಉಡುಗೊರೆ ನೀಡುವಲ್ಲಿ ಕರ್ತವ್ಯವಿದೆ ಎಂದೆನಿಸಿತು. ಹಾಗಾಗಿ ಪತ್ರಿಕೋದ್ಯಮದ ಆಶಯಗಳನ್ನು ಜೊತೆಗಿಟ್ಟುಕೊಂಡು, ಸಾಂಸ್ಕೃತಿಕ ಅಡಿಪಾಯದಲ್ಲಿ ನೃತ್ಯದ ವಿವಿಧ ಆಯಾಮಗಳತ್ತ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಎಂಬ ನಂಬುಗೆಯಲ್ಲಿ ಅರಳುತ್ತಿದೆ ಎರಡು ವರ್ಷದ ಕಿಶೋರಿ ನೂಪುರಭ್ರಮರಿ’.
ಪತ್ರಿಕೆ ಹುಟ್ಟುಹಾಕುವುದೇನೋ ಸುಲಭ. ಆದರೆ ಅದರ ಸಮರ್ಥ ರೂಪಿಸುವಿಕೆ, ಬೆಳೆಸುವಿಕೆ ಕಷ್ಟಸಾಧ್ಯ. ಹಲವಾರು ಸವಾಲುಗಳನ್ನು ಬೇಡುವ ರಂಗವಿದು. ಸಾಂಸ್ಕೃತಿಕ ರಂಗದ ಬಗ್ಗೆ ಅದರಲ್ಲೂ ನೃತ್ಯದ ಕುರಿತಾಗಿ ಸೀಮಿತ ಅಭಿಪ್ರಾಯಗಳು, ಸೀಮಿತ ಓದುಗರು, ಓದುವ ಮತ್ತು ಬರೆಯುವ ನಿಟ್ಟಿನಲ್ಲೂ ಸೀಮಿತ ಸಾಧ್ಯತೆಗಳಿವೆ. ಆದರೆ ಪತ್ರಿಕೆಯನ್ನು ಕೇವಲ ನೃತ್ಯ-ನಾಟ್ಯರಂಗದ ಕಲಾವಿದರಿಗೆ, ಗುರುಗಳಿಗೆ ಸೀಮಿತವಾಗಿರಿಸದೆ ಸಾಮಾನ್ಯ ವೀಕ್ಷಕ, ಓದುಗರಿಗೂ ಮುಟ್ಟಬೇಕು, ಸದಭಿರುಚಿಯ ಎಲ್ಲರಿಗೂ ತಲುಪುವಂತಾಗಬೇಕು ಎಂಬ ಆಶಯ ನಮ್ಮದು. ನೃತ್ಯದ ಕುರಿತಾಗಿ ಚಿಂತನೆಗಳು ಎಲ್ಲಾ ಕಡೆಯಿಂದಲೂ ಹರಿದು ಬಂದು ನೃತ್ಯದ ಆಯಾಮಗಳತ್ತ ಜಾಗೃತಿ, ಅರಿವು ಮೂಡಬೇಕೆಂಬ ಹಂಬಲ ನಮ್ಮದು . ‘ಸೀಮಿತ ವರ್ಗಕ್ಕೆ ಮಾತ್ರ’ ಎಂಬ ಅಪವಾದವನ್ನು ಬದಿಗಿರಿಸಿ ನರ್ತನ ಜಗತ್ತಿನ ಹಲವು ಒಳತೋಟಿಗಳನ್ನು ಅರ್ಥವಾಗುವಂತೆ ವಿವರಿಸುವ ಪ್ರಯತ್ನ ಜೊತೆಗಿನದು. ಪ್ರಾಂತೀಯ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು ಭರತನಾಟ್ಯಕ್ಕೆ ಹೆಚ್ಚಿನ ಅವಕಾಶ ಕೊಡುವ ಉದ್ದೇಶವಿದೆಯಾದರೂ, ಇತರ ನೃತ್ಯಪ್ರಕಾರಗಳ ಕುರಿತು ಸಾದ್ಯಂತವಾಗಿ ವಿಚಾರ ವಿಮರ್ಶೆಗಳನ್ನು ಹಂಚಿಕೊಳ್ಳುವ ಕನಸಿನಲಿ ಆರಂಭಗೊಂಡರೂ ಈಗ ಅಸಾಧ್ಯ ಸಾಧ್ಯತೆಗಳನ್ನು ಬಗಲಿಗಿರಿಸಿಕೊಂಡು ಮುನ್ನಡೆಯುತ್ತಿದೆ. ತಾವೆಲ್ಲರೂ ’ನೂಪುರ ಭ್ರಮರಿಯ ಜೊತೆಗಿರುತ್ತೀರಿ ಎಂಬ ನಂಬಿಕೆಯನ್ನು ಬಗಲಿಗಿಟ್ಟು ಮುನ್ನಡೆಯುತ್ತೇವೆ...
ನೂಪುರ ಭ್ರಮರಿಯ ಪ್ರಥಮ ಸಂಚಿಕೆ ಅನಾವರಣಗೊಂಡದ್ದು ಮಡಿಕೇರಿಯಲ್ಲಿ ಶಿವರಾತ್ರಿ ಅಂಗವಾಗಿ ನೃತ್ಯ ಮಂಟಪ ಟ್ರಸ್ಟ್ ಆಯೋಜಿಸಿದ ನಟರಾಜೋತ್ಸವದಲ್ಲಿ. ಅತಿಥಿಗಳಾಗಿ ಆಗಮಿಸಿದ್ದ ’ಶಕ್ತಿ’ ದೈನಿಕದ ಸಹ ಸಂಪಾದಕ ಶ್ರೀಯುತ ಬಿ. ಜಿ. ಅನಂತಶಯನ, ಆಯುರ್ವೇದ ವೈದ್ಯ, ಸಾಹಿತಿ ನಡಿಬೈಲು ಉದಯಶಂಕರ, ಹಾಗೂ ಶ್ರೀಮತಿ ರೂಪಾ ಶ್ರೀಕೃಷ್ಣ ಉಪಾಧ್ಯ ಅವರು ಪತ್ರಿಕೆಯನ್ನು ಮೊದಲು ತೆರೆದಿಟ್ಟವರು. ನಚಿತರ ೧೦ ಫೆಬ್ರವರಿ ೨೦೦೮ರಂದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ ನೆರೆದ ಸಮಸ್ತ್ರ ಮುಂದೆ ವೆಬ್ಸೈಟ್ ಉದ್ಘಾಟನೆ, ವಿಶೇಷ ಸಂZಕೆ ಅನಾವರಣ, ತಾಳಮದ್ದಲೆ ಕಾರ್ಯಕ್ರಮ, ಇತಿಹಾಸ ಪುಸ್ತಕದ ಅನಾವರಣಗಳು ನಡೆದವು. ಸಾಹಿತಿ ಕೆ.ಪಿ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಯಕ್ಷಗಾನ ಕಲಾವಿದ, ವಿಮರ್ಶಕ ಸರ್ಪಂಗಳ ಈಶ್ವರ ಭಟ್, ವಿದ್ಯಾಭವನದ ಉಪಾಧ್ಯಕ್ಷ ಕೆ.ಎಸ್. ದೇವಯ್ಯ, ಉಜಿರೆ ಎಸ್ ಡಿ‌ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಭಾಸ್ಕರ ಹೆಗಡೆ ಅವರ ಘನ ಉಪಸ್ಥಿತಿಯಲ್ಲಿ ಜರುಗಿತು. ಹೀಗೆ ಶುಭ ಸಂದರ್ಭದಲ್ಲಿ ಶುಭಾಂಸನೆ ಪಡೆದುಕೊಂಡ ನೂಪುರ ಭ್ರಮರಿಯ ಯಾತ್ರೆ ನಿರಂತರವಾಗಿ ನಡೆಯಬೇಕೆಂಬುದು ನಮ್ಮೆಲ್ಲರ ಕನಸು. ಈಗಾಗಲೇ ನೃತ್ಯ ಜಗತ್ತಿನ ಹಲವು ವಿಮರ್ಶಕರು, ಖ್ಯಾತ ಕಲಾವಿದರು, ಗುರುಹಿರಿಯರು, ಓದುಗರಿಂದ ಮನ್ನಣೆ ಪಡೆದುಕೊಂಡಿದೆ.
ಇಂತಹ ಪುಟ್ಟ ವಿಷಯಗಳನ್ನು ತಮ್ಮಲ್ಲಿ ಅರಿಕೆ ಮಾಡಿಕೊಂಡರಷ್ಟೇ ಓದುಗ ಸಹೃದಯರು ಅರ್ಥ ಮಾಡಿಕೊಂಡಾರು ಎನ್ನುವ ಧಾರ್ಷ್ಟ್ಯ ನಮ್ಮದಲ್ಲ. ಬದಲಾಗಿ ಪತ್ರಿಕೆಯ ಇತಿಮಿತಿಗಳನ್ನು ತಿಳಿಸುವುದು ಕರ್ತವ್ಯವೆಂಬುದು ನಮ್ಮ ಭಾವನೆ. ನಿಮ್ಮ ಹೃದಯ ಶ್ರೀಮಂತಿಕೆಯ ಮುಂದೆ ನಮ್ಮ ಪ್ರಯತ್ನಗಳು ಫಲ ಕೊಡಬೇಕೆನ್ನಿಸುವುದಷ್ಟೇ ನಮ್ಮ ಆಶಯ. ಪತ್ರಿಕೆಯ ನಿರೂಪಣೆಯ ಹಿಂದೆ ನಮ್ಮಷ್ಟೇ ಜವಾಬ್ದಾರಿ ಓದುಗರಿಗೂ ಇದೆ. ಸಾಂಸ್ಕೃತಿಕ ಪತ್ರಿಕೆಗಳ ಸಾಲಿನಲ್ಲಿ ‘ನೂಪುರ ಭ್ರಮರಿ’ ಮೈಲಿಗಲ್ಲಾದರೆ ಅದರ ಯಶಸ್ಸು ಓದುಗರಿಗೇ ಸೇರಬೇಕಾದದ್ದು.
ಪುಟಾಣಿ ಪತ್ರಿಕೆಯಾದರೂ, ಇದು ಮೌಲ್ಯಯುತವಾದುದನ್ನಷ್ಟೇ ಹಂಚಿಕೊಳ್ಳುತ್ತದೆ ಎಂಬ ಆಶ್ವಾಸನೆ ನಮ್ಮದು. ಜೊತೆಗೆ ಇದರ ಹಿಂದೆ ಯಾವುದೇ ಲಾಭದ ಉದ್ದೇಶವೂ ಇದರ ಹಿಂದಿಲ್ಲ ಕೂಡಾ ! ಹಾಗೆ ನೋಡಿದರೆ, ಒಂದು ಸಂಚಿಕೆಗೆ ಏನಿಲ್ಲವೆಂದರೂ ಮೂರುಸಾವಿರದಿಂದ ಐದು ಸಾವಿರ ಖರ್ಚು ತಗಲುತ್ತದೆ. ಈ ವರೆಗೆ ಸಹ್ಲದಯರ ಸಹಕಾರ ಮತ್ತು ಬಳಗದವರ ಪ್ರೋತ್ಸಾಹಗಳಿಂದ ಸ್ವಲ್ಪ ವೆಚ್ಚವನ್ನು ಭರಿಸಿದೆ. ಹಾಗೆ ನೋಡಿದರೆ ಈ ಎರಡು ವರ್ಷಗಳ ಪರ್ಯಂತ ಓದುಗರು ಹೆಚ್ಚಿ ಉತ್ತಮ ಮನ್ನಣೆ ಸಿಕಿದ್ದು ಬಿಟ್ಟರೆ ಆರ್ಥಿಕವಾಗಿ ಸುಮಾರು ೩೫,೦೦೦ ರೂ. ಗಳಿಗಿಂತಲೂ ಹೆಚ್ಚು ನಷ್ಟವೇ ಆಗಿದೆ. ಆದರೆ ಕಲಾಸೇವೆಯ ಹಿನ್ನಲೆಯಲ್ಲಿ, ಆಸಕ್ತಿಯಲ್ಲಿ ಅದು ದೊಡ್ಡ ವಿಷಯವಾಗಿ ಕಂಡಿಲ್ಲ.ಏನಿದ್ದರು, ನಮ್ಮನ್ನು ನಾವು ಕಂಡುಕೊಳ್ಳುವ, ಅರಿಯುವ, ಅರ್ಥೈಸುವ, ಅರಿವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಕ್ತವೇದಿಕೆ ರೂಪುಗೊಳ್ಳಬೇಕೆಂಬ ಸಣ್ಣ ಮಟ್ಟಿನ ಸ್ವಾರ್ಥ.
ಪತ್ರಿಕೋದ್ಯಮ ಎನ್ನುವ ಕೃಷಿಯಲ್ಲಿ ನೂಪುರ ಭ್ರಮರಿ ಇನ್ನೂ ಚಿಗುರೊಡೆಯುವ ಸಸಿ. ಅದನ್ನು ಭವಿಷ್ಯದ ಹೆಮ್ಮರವಾಗಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ನೃತ್ಯದ ಕುರಿತಾಗಿ ಬರುವ ಕ್ಲೀಷೆಯೆನಿಸಿಕೊಂಡ ಮಾಮೂಲಿ ವಿಮರ್ಶೆಗಳ ಸಾಧ್ಯತೆಯನ್ನು ಆದಷ್ಟೂ ಕಡಿಮೆ ಮಾಡುವುದು ಪತ್ರಿಕೆಯ ಆಶಯಗಳಲ್ಲೊಂದು. ಹಾಗಂತ ಆವರಣವಿಲ್ಲವೆಂದಲ್ಲ. ಆವರಣವಿಲ್ಲದ ಕೃಷಿ ಕಾಡಾಗಿ, ಮುಳ್ಳು ಕಂಟಿಗಳ ಸ್ಥಾನವಾಗಿ ಹೋಗುತ್ತದೆ. ಆದರೆ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಪರಿಪಾಠ ಮುಂದುವರಿಯದಂತೆ ನೋಡಿಕೊಳ್ಳಬೇಕೆಂಬ ಆಸೆಯಿದೆ.
ಭ್ರಮರಿಯ ಸೃಜನಶೀಲತೆಯನ್ನು ಕೆಲವರು ತಮ್ಮದೇ ಸ್ವಂತ ಎಂಬ ರೀತಿಯಲ್ಲಿ ಬಳಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ! ಇದು ಕೇವಲ ಅವರು ಉಳಿಸಿಕೊಳ್ಳಬೇಕಾದ ನಂಬಿಕೆಯ ಪ್ರಶ್ನೆಯಷ್ಟೇ ಅಲ್ಲ, ಬದಲಾಗಿ ಅವರಿಗಿರಬೇಕಾದ ಮನಃಸ್ಸಾಕ್ಷಿಯ ಪ್ರಶ್ನೆಯೂ ಕೂಡಾ! ಒಂದು ವೇಳೆ ಅಂತಹ ಸೃಜನಶೀಲತೆಯನ್ನು ಬಳಸಿಕೊಳ್ಳುವುದೇ ಆದಲ್ಲಿ, ಸೌಜನ್ಯದ ಸಂಭೋಧನೆಗಳಿರಬೇಕಾದದ್ದು ಒಳ್ಳೆಯದು ತಾನೇ?
ಇಂದಿನ ದಿನಗಳಲ್ಲಿ ಪತ್ರಿಕೆಯೊಂದನ್ನು, ಅದೂ ಯಾವುದೇ ಜಾಹೀರಾತಿನ ನೆರವಿಲ್ಲದ, ಭಾರೀ ಆರ್ಥಿಕ ಹಿನ್ನಲೆಯೂ ಇಲ್ಲದ ಪತ್ರಿಕೆಯೊಂದನ್ನು ಮುನ್ನಡೆಸುವುದು ಎಷ್ಟು ಕಷ್ಟ ಅನ್ನುವುದು ನಿಮಗೆ ತಿಳಿದಿದೆ. ಅದರಲ್ಲೂ ಯಾವುದೇ ಲಾಭದ ದೃಷ್ಠಿಯಿಲ್ಲದೆ ಸಮಷ್ಠಿಯ ಒಳಿತಿಗಾಗಿ, ಕಲೆಗೆ ಪುಟ್ಟ ಕಾಣಿಕೆ ನೀಡುವಲ್ಲಿ ಪತ್ರಿಕೆಯೊಂದು ರೂಪುಗೊಳ್ಳುತ್ತಿದೆ ಎಂದಾದಲ್ಲಿ ಅದರ ಹಿಂದಿನ ಸವಾಲುಗಳು ನಿಮಗರಿವಿರಬಹುದು. ರೂಪುಗೊಳ್ಳುತ್ತಿರುವುದರಿಂದ ಆದರೂ ಪುಟ್ಟ ಪುಟ್ಟ ಅಡಿಯಿಡುತ್ತಿರುವ ನೂಪುರ ಭ್ರಮರಿಯು ತನ್ನ ಲೇಖನಗಳ ಹಂಚಿಕೆ, ಮುದ್ರಣ, ವಿತರಣೆಗೆ ಬಹಳಷ್ಟು ಸಲ ಸ್ವಾವಲಂಬಿ ನೀತಿಯನ್ನು ಅಂದರೆ ಸ್ವಂತ ಖರ್ಚು-ಉಳಿತಾಯವನ್ನು ಅವಲಂಬಿಸಿದೆ. ಆದರೂ ಕಲಾಸಕ್ತರು ತಾವೇ ಮುಂದೆ ಬಂದು ತಮ್ಮಿಂದಾದಷ್ಟೂ ಸಹಕಾರ, ಪ್ರೋತ್ಸಾಹವನ್ನೀಯುತ್ತೀದ್ದಾರೆ
ಈ ’ಭ್ರಮರಿ’ ನಿಮ್ಮದು, ನಮ್ಮೆಲ್ಲರದು, ಗುರು-ಕಲಾವಿದರನ್ನು ಒಳಗೊಂಡಂತೆ ಸಾಮಾನ್ಯ ಜನರೂ ನೃತ್ಯ ಕ್ಷೇತ್ರದ ಕುರಿತಂತೆ ಸಂವಾದದಲ್ಲಿ ಪಾಲ್ಗೊಳ್ಳಬೇಕು, ನೃತ್ಯವೆಂಬುದು ಸೀಮಿತ ಕ್ಷೇತ್ರವಾಗದೇ ಮುಕ್ತ ಅವಕಾಶ ಅನುಭವಗಳನ್ನು ಕಲ್ಪಿಸಬೇಕು. ನೃತ್ಯದ ಬಗ್ಗೆ ಎಲ್ಲಾ ರೀತಿಯ ಪರ-ವಿರೋಧವನ್ನು ಒಳಗೊಂಡಂತೆ ಅಭಿಪ್ರಾಯಗಳು ಹರಿದು ಬರಬೇಕು, ಗುಣಾತ್ಮಕ ಚಿಂತನೆಗೆ ಅವಕಾಶಬೇಕು, ಬರಿಯ ಶಾಸ್ತ್ರೀಯ, ಪಾರಂಪರಿಕ ಜ್ಞಾನವನ್ನಷ್ಟೆ ಮುಂದಿಡುವುದಲ್ಲ, ಬದಲಾಗಿ ಪ್ರಚಲಿತ ಸ್ಥಿತಿಗಳತ್ತಲೂ ದೃಷ್ಟಿ ಹೊರಳಿಸಬೇಕೆಂದು ನಮ್ಮ ನಿಲುವು.ಇದರ ಬೆಳವಣಿಗೆಗೆ ನಿಮ್ಮ ಕೊಡುಗೆ, ಸಹಕಾರ ಅತ್ಯಗತ್ಯ ಮತ್ತು ಅಮೂಲ್ಯ. ಹಾಗಾಗಿ ನಮ್ಮೆಲ್ಲರ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ನಿಮ್ಮ ಲೇಖನಿಯಿಂದ ವಿಚಾರಗಳು ಹರಿದುಬರಲಿ. ನಮ್ಮೆಲ್ಲರನ್ನೂ ಮಂಥಿಸಲಿ.

No comments: